Articles

“ಸರ್, ಮತ್ತೊಮ್ಮೆ ತಾಯಿಮನೆಗೆ ಹೋಗಿಬರೋಣವೆ!?”

- ಚೇತನ್ ಸಿ ರಾಯನಹಳ್ಳಿ

ಶಾಲಾ ಮಕ್ಕಳಿಂದ ಆರಂಭವಾಗಿದ್ದ ‘ಸಂಕಲ್ಪಂ’ ಸೇವೆಯನ್ನು ಈ ವರ್ಷದಲ್ಲಿ ಹೇಗೆ ಮುಂದುವರೆಸಿಕೊಂಡು ಹೋಗಬಹುದು ಎಂಬುದನ್ನು ನೋಡಿದಾಗ ಒಂದಿಷ್ಟು ವಿಶೇಷ ವಿದ್ಯಾರ್ಥಿಗಳನ್ನು ನೋಡಿದ್ದೆವು. ತಾವಾಯಿತು, ತಮ್ಮ ಪಾಡಾಯಿತು ಎನ್ನುವವರ ಮಧ್ಯೆ ಇತರರಿಗೆ ಸಹಕಾರಿಯಾಗಿ, ತಿಳಿಸುವ, ಕಲಿಸುವ, ಕಲಿಯುವ ಒಂದಿಷ್ಟಾದರೂ ಸೇವೆಗೈಯುವ ಮನಸ್ಥಿತಿ ಉಳ್ಳ ಮನಸ್ಸಿನ ಮಕ್ಕಳೇ ಈ ಬಾರಿಯ ಸೇವೆಗೆ ಸಿಕ್ಕದ್ದು ವಿಶೇಷವೇ ಸರಿ.
ಒಂದೊಳ್ಳೆಯ ಸೇವಾಭಾವನೆಯ ಸರಿಸುಮಾರು ೧೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಒಂದು ತಂಡ ಈ ಬಾರಿ ರಚನೆಯಾಗಿತ್ತು. ಪೋಷಕರು ಕೊಡುವ ಪಾಕೆಟ್‌ಮನಿ ಉಳಿಸಿ ಅದರಿಂದ ಸಹಾಯಮಾಡಿದ್ದು, ಹುಟ್ಟುಹಬ್ಬಕ್ಕೆ ವೃದ್ದಾಶ್ರಮ, ಮಕ್ಕಳ ಆಶ್ರಮ ಹೀಗೆ ಎಲ್ಲಾದರೊಂದು ಕಡೆಯಲ್ಲಿ ಅವರಿಗೆ ಊಟದ ವ್ಯವಸ್ಥೆ ಮಾಡುವುದು, ಗಿಡ ನೆಡುವುದು, ಇತರ ಕಡೆಗಳಲ್ಲಿ ಪುಟ್ಟಮಕ್ಕಳಿಗೆ ಪಾಠಮಾಡುವುದು… ಹೀಗೆ ಅದೇನೋ ಒಂದಿಷ್ಟು ಈಗಿಂದಲೇ ಸಮಾಜದ ಭಾಗವಾಗಿ, ಅದರ ಜವಾಬ್ದಾರಿ ತೆಗೆದುಕೊಂಡು ಸರಿಪಡಿಸುವ, ಸೇವೆ ಮಾಡುವ ಗುಣವನ್ನು ಹೊಂದಿದವರಾಗಿದ್ದರು.

sri krishnadevaraya hampi


ಒಮ್ಮೆ ಮುಖ್ಯೋಪಾಧ್ಯಾರೊಡನೆ ಮಾತನಾಡುತ್ತಿದ್ದಾಗ ಈ ವಿಶೇಷ ಆಸಕ್ತಿ ಇದ್ದ ಮಕ್ಕಳಿಗೆ ಇತರರೊಂದಿಗೆ ಬೆರೆಯಲು ಒಂದು ಅವಕಾಶ ಮಾಡಿಕೊಟ್ಟರೆ ಹೇಗೆ ಎಂಬ ಆಲೋಚನೆ ಬಂದಿತು. ಅದನ್ನು ಮಕ್ಕಳ ಜೊತೆಗೆ ಹಂಚಿಕೊಂಡಾಗ ಎಲ್ಲರೂ ಒಂದಿಷ್ಟು ಸಮಯ ಎಲ್ಲವನ್ನು ಮರೆತು ಮನಸ್ಸು ಹಗುರಾಗಬಹುದೆಂದು ಒಪ್ಪಿದರು. ಎಲ್ಲಿ? ಏನು? ಎತ್ತ? ಎಂದು ಯೋಚಿಸುವಾಗ ಗೆಳೆಯ ಸುದರ್ಶನ್ ಅವರ ‘ತಾಯಿಮನೆ’ ಎಂಬ ವಿಶಿಷ್ಟವಾದ ರೀತಿಯಲ್ಲಿ ಮಕ್ಕಳ ಆಶ್ರಮವನ್ನು ನಡೆಸುತ್ತಿದ್ದುದನ್ನು ನೋಡಿದ್ದೆವು ಹಾಗಾಗಿ, ‘ಒಂದಿಷ್ಟು ಸಮಯ ನಮ್ಮ ಶಾಲಾ ಮಕ್ಕಳಿಗೆ ಅಲ್ಲಿಯ ಮಕ್ಕಳ ಜೊತೆಗೆ ಬೆರೆಯಲು ಅವಕಾಶ ಮಾಡಿಕೊಡಬಹುದಾ?’ ‘ಅದಕ್ಕೇನಂತೆ ಇದು ನಿಮ್ಮದೆ ಎಂದು ತಿಳಿಯಿರಿ. ಧಾರಾಳವಾಗಿ ಬನ್ನಿ’ ಎಂದರು. ಈ ಮಕ್ಕಳನ್ನು ಕರೆದು ಒಂದು ಶನಿವಾರ ಮಧ್ಯಾಹ್ನ ಹೀಗೆ ಹೋಗಿಬರೋಣ ಎಂದಾಗ ಭಾವನ ಮತ್ತು ರಕ್ಷ, ‘ನಾವು ಹಾಡುಗಳನ್ನು ಹಾಡುತ್ತೇವೆ’ ಆದಿತ್ಯ ಸಿದ್ದಾಂತಿ, ವಿಷ್ಣು ಇಬ್ಬರೂ ‘ಒಂದಿಷ್ಟು ಹಾಡುಗಳನ್ನು ಕೀಬೋರ್ಡ್ನಲ್ಲಿ ನುಡಿಸುತ್ತೇವೆ’ ಎಂದೂ ಸಂಕೇತ್ ಕಶ್ಯಪ್, ಹರೀಶ್, ರೋಹಿತ್, ‘ಮನೆಯಿಂದ ಒಂದಿಷ್ಟು ತಿಂಡಿಗಳನ್ನು ಮಾಡಿಸಿಕೊಂಡು ಬರುತ್ತೇವೆ’, ವಚನ, ವೈಷ್ಣವಿ ಮತ್ತು ಅನನ್ಯ, ‘ಒಂದಿಷ್ಟು ಅಲ್ಲಿಯ ಮಕ್ಕಳಿಗೆ ಆಟಗಳನ್ನು ಆಡಿಸುತ್ತೇವೆ’ ಹೀಗೆ ಅವರುಗಳೇ ತಮ್ಮತಮ್ಮ ಕರ‍್ಯಗಳನ್ನು ಹಂಚಿಕೊAಡದ್ದು ಸಂತೋಷ ನೀಡಿತು. ಎಲ್ಲಾ ಮುಗ್ದ ಮನಸ್ಸುಗಳು ಅಂತಹದೇ ಆದ ಮನಸ್ಸನ್ನು ಭೇಟಿಯಾಗಲು ಸಿದ್ದತೆಗಳನ್ನು ನಡೆಸಿದರು. ಅಲ್ಲಿ ಒಟ್ಟಾರೆಯಾಗಿ ೨೫ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳು ಮಾತ್ರ ಇದ್ದರು. ನಿಗದಿತ ಸಮಯದಲ್ಲಿ ಮಕ್ಕಳು ಸರಿಯಾಗಿ ವಿಳಾಸವನ್ನು ತಿಳಿದು ಅಲ್ಲಿಗೆ ಬಂದರು. ನಮ್ಮ ಇಂಗ್ಲೀಷ್ ಸಹಶಿಕ್ಷಕಿ ಮಂಜುಳಾ ಮೇಡಂ ಬಂದು ಎಲ್ಲಾ ಮಕ್ಕಳನ್ನು ಪರಿಚಯ ಮಾಡಿಕೊಂಡು ಮಾತನಾಡಿಸುವ ಸಮಯಕ್ಕೆ ಸರಿಯಾಗಿ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ಬಂದರು. ಎಲ್ಲರೂ ಒಂದು ವೃತ್ತವನ್ನು ಮಾಡಿ ಕುಳಿತುಕೊಂಡು ಪ್ರತಿಯೊಬ್ಬರೂ, ಪ್ರತಿಯೊಬ್ಬರ ಪರಿಚಯ ಮಾಡಿಕೊಂಡೆವು.

ಪ್ರಾರ್ಥನೆಯನ್ನು ನಮ್ಮ ಮಕ್ಕಳು ನರವೇರಿಸಿದರು. ಆಗ ತಾಯಿಮನೆಯ ಮಕ್ಕಳೆಲ್ಲ ಸೇರಿ ಒಂದು ಗೀತೆಯನ್ನು ಹಾಡಿದರು. ಕೀಬೋರ್ಡ್ನಲ್ಲಿ ಹಾಡಿನ ಚರಣವನ್ನು ನುಡಿಸಿದರು ತದ ನಂತರ ಅವರೆಲ್ಲರೂ ‘ಇದೇ ಹಾಡು’ ಇವರು ನುಡಿಸಿದ್ದು ಎಂದು ಗುರುತಿಸಿ ಹಾಡಲು ಶುರುಮಾಡಿದಾಗ ಮತ್ತೇ ಸಂಗೀತದ ಸಾತ್ ನೀಡಿದರು. ಬಹಳ ತರಲೆ, ತುಂಟಾಟ ಆಡುತ್ತಿದ್ದ ೨ನೇ ತರಗತಿಯ ಸಂತು ಎಲ್ಲರಿಗೂ ಪ್ರಿಯನಾಗಿ ಬಿಟ್ಟಿದ್ದ. ಆತನನ್ನು ಹಿಡಿದು ಒಂದೆಡೆ ಕೂರಿಸುವುದೇ ಸಾಹಸವಾಗಿತ್ತು. ‘ನಾನು ಕೀಬೋರ್ಡ್ ಒತ್ತಲಾ?’ ಬಹಳ ವಿನಯತೆಯಿಂದ ಕೇಳಿದ. ಸ್ವಲ್ಪ ಹೊತ್ತು ಸುಮ್ಮನೆ ಕುಳಿತರೆ ಖಂಡಿತವಾಗಿ ಕೊಡುತ್ತೇವೆ ಎಂದಾಗ ಪಾಪ ಅದಕ್ಕೆ ಒಪ್ಪಿ ಸ್ವಲ್ಪ ಹೊತ್ತು ಮಾತ್ರ ಸುಮ್ಮನೆ ಕೂತಿದ್ದ ಅಷ್ಟೇ. ಒಂದಿಷ್ಟು ಆಟಗಳನ್ನು ಎಲ್ಲಾರೂ ಸೇರಿ ಆಡಿದೆವು. ಎಂದೋ ಬಹಳ ಹಿಂದೆ ಹೇಳಿಕೊಟ್ಟಿದ್ದ ಅಭಿನಯ ಗೀತೆಯನ್ನು ನೆನಪಿಸಿ ಮತ್ತೊಮ್ಮೆ ಅದನ್ನು ಹೇಳಿಕೊಡಿ ಎಂದರು. ಅದನ್ನಂತೂ ಬಹಳ ಸಂತೋಷದಿAದ ಕುಣಿದು ಕುಪ್ಪಳಿಸಿ, ಹಾಡಿ-ನಲಿದದ್ದಾಯಿತು. ತಂದಿದ್ದ ಒಂದಿಷ್ಟು ತಿಂಡಿ-ತಿನಿಸನ್ನು, ಸಿಹಿ ಪದಾರ್ಥವನ್ನು ಎಲ್ಲರೂ ಒಟ್ಟಿಗೆ ಕೂತು ತಿಂದು ಮುಗಿಸುವ ಹೊತ್ತಿಗೆ ಅಲ್ಲಿಗೆ ಸಂತೂ ಕಸದಬುಟ್ಟಿ ತಂದು ಇಟ್ಟು ಜಾಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಬಗ್ಗೆ ಏನನ್ನೂ ಆಡದೆ ಮಾಡಿತೋರಿಸಿದ. ಎಲ್ಲರೂ ಅವನಂತೆ ನಡೆದುಕೊಂಡರು ಸಹ.
ಮೇಲಿನ ಸಭಾಂಗಣದಲ್ಲಿ ನಕ್ಕು-ನಲಿದು, ಕೈಮೇಲೆ ಒಂದಿಷ್ಟು ಚಿತ್ರಗಳನ್ನು ಬಿಡಿಸಿ, ಆ ತರಲೆ-ತುಂಟಾಟಗಳ ಫೋಟೋಗಳನ್ನು ತೆಗೆದುಕೊಂಡು ಹೊರಡುವಾಗ ಅಲ್ಲಿನ ಮೊಲದ ಮರಿಗಳನ್ನು ಕಂಡೆವು ಅಲ್ಲಿನ ಮಕ್ಕಳು ಅವನ್ನು ತೆಗೆದು ಕೈಗಿಟ್ಟರು. ಅವುಗಳಿಗೆ ತಿನ್ನಿಸಲು ಸೊಪ್ಪು-ತರಕಾರಿಗಳನ್ನು ಅವರುಗಳೇ ನೀಡಿದರು. ಸಮಯ ಸರಿದದ್ದೇ ತಿಳಿಯಲಿಲ್ಲ. ಎಲ್ಲರೂ ಹೊರಡಲು ಅಣಿಯಾದೆವು.
ಅಲ್ಲಿನ ಮಕ್ಕಳು, ‘ನೀವೇನೋ ಬರ್ತಾ ಇರ್ತಿರಿ, ಆಗಾಗ ಇವರುಗಳನ್ನು ಕರ್ಕೊಂಡು ಬರ್ತಾ ಇರೀ.. ಇವರುಗಳ ಜೊತೆಗೆ ಇದ್ದಾಗ ಸಮಯ ಚೆನಾಗಿರತ್ತೆ ಮತ್ತೆ ಎಲ್ಲರೂ ಬರ್ತಿರ ಅಲಾ? ಎಂದಾಗ ಇಲ್ಲ ಎಂದು ಹೇಳಲು ಮನಸ್ಸಾಗಲಿಲ್ಲ, ಎಲ್ಲರೂ ಬಂದೇ ಬರುತ್ತೇವೆ ಎಂದರು.
ಇoದಿಗೆ ಅದೆಷ್ಟೊ ವರ್ಷಗಳಾಗಿವೆ, ಸಂಕೇತ್ ಬಿಡುವಾದಾಗಲೆಲ್ಲ, ‘ಸರ್ ಮತ್ತೊಮ್ಮೆ ತಾಯಿಮನೆಗೆ ಹೋಗಿಬರೋಣವೆ?’ ಎಂದು ಅದೆಷ್ಟು ಸಲ ಕೇಳಿದ್ದಾನೋ ಇಬ್ಬರೂ ಆಗಾಗ ಹೋಗಿ ಬರ್ತಾ ಇರ್ತಿವಿ ಕೂಡ. ರಕ್ಷ, ವಚನ ಅವರ ಮನೆಯಲ್ಲಿ ಏನಾದರೂ ಶುಭಕರ‍್ಯವಿದ್ದರೆ, ಸಂತೋಷದ ಕ್ಷಣಗಳಿದ್ದರೆ ಇಲ್ಲಿನ ಮಕ್ಕಳ ಜೊತೆಗೆ ಹಂಚಿಕೊಳ್ಳುವ, ಅವರಿಗಾಗಿ ಪೆನ್ನು, ಪೆನ್ಸಿಲ್, ಪುಸ್ತಕಗಳನ್ನು ತೆಗೆದುಕೊಳ್ಳುವ, ಅವರ ಸಮಯವನ್ನು ಸುಂದರವಾಗಿಸುವ ಹೀಗೆ ಇವೆಲ್ಲವೂ ನೋಡಿದಾಗ ನಮ್ಮಲ್ಲಿ ಬರಬೇಕಾದ ಸುಂದರ ಭಾವನೆ ಇದೇ ಅಲ್ಲವೆ?


ಯಾವುದೇ ಸಂಬಂಧವಿಲ್ಲದಿದ್ದರೂ ಮನುಷ್ಯತ್ವದ ಅನುಬಂಧ ಬೆಸೆದುಕೊಂಡಿರುವುದು, ಮತ್ತೆಮತ್ತೆ ಅವರುಗಳನ್ನು ಭೇಟಿಯಾಗುವುದು, ನಮ್ಮವರು ಎಂಬ ಭಾವನೆ ಮೂಡಿರುವುದು, ಎಲ್ಲಾ ಮಕ್ಕಳಿಗೂ ಅದೊಂದು ಮರೆಯಲಾಗದ ಕ್ಷಣಗಳು, ಬದುಕು ಪಠ್ಯಪುಸ್ತಕಗಳಿಲ್ಲದೆ ಕಲಿಸಿದ ಸುಂದರ ಪಾಠಗಳು..

Contact us for classifieds and ads : +91 9742974234



 
error: Content is protected !!