Articles

“ಪುಸ್ತಕದೊಳಗಿದ್ದವರ ಮನೆಯೊಳಗೆ ನಾನು ನಮ್ಮ ವಿದ್ಯಾರ್ಥಿಗಳು..”

- ಚೇತನ್ ಸಿ ರಾಯನಹಳ್ಳಿ

“ಪುಸ್ತಕದೊಳಗಿದ್ದವರ ಮನೆಯೊಳಗೆ ನಾವುಗಳು..!?”
ಒಮ್ಮೆ ೮ನೇ ತರಗತಿಯಲ್ಲಿ ಕೆ.ಸಿ.ಶಶಿಧರ್ ಅವರ ‘ಅಜ್ಜನ ತೋಟ’ ಪಾಠವನ್ನು ಮಾಡುವಾಗ ಅದರೊಳಗೆ ‘ದುಮ್ಮಳ್ಳಿಶಿವಮ್ಮ’ ಎಂಬ ‘ಕೃಷಿಪಂಡಿತ’ ಪ್ರಶಸ್ತಿ ಪುರಸ್ಕöÈತರ ಬಗ್ಗೆ ತಿಳಿಸಲಾಗಿತ್ತು. ಪಾಠದ ಮಧ್ಯೆ ಅವರ ಊರು ಶಿವಮೊಗ್ಗದ ಸಮೀಪದಲ್ಲಿದೆ. ಬೇಕಾದರೆ ಹೋಗಿ ಮಾತನಾಡಿಸಿಕೊಂಡು ಬನ್ನಿ ಎಂದಾಗ ಸುಷ್ಮಾ, ‘ಸರ್ ಅವರು ಇನ್ನೂ ಇದಾರಾ?’ ‘ಯಾಕಮ್ಮಾ ಪುಸ್ತಕದಲ್ಲಿ ಇದ್ದೋರೆಲ್ಲ ಇಲ್ಲ ಅನ್ಕೊಂಡಿಯಾ? ಈ ಪುಸ್ತಕದಲ್ಲಿ ಇರುವ ಅನೇಕರನ್ನು ನಾವು ಭೇಟಿಯಾಗಿ ಮಾತಾಡಿಸಬಹುದು, ಅದರಲ್ಲಿ ಯಾವುದೇ ಅನುಮಾನ ಬೇಡ’ ಎಂದದ್ದಾಯಿತು. ಡಿಸೆಂಬರ್ ೨೩ ಕಿಸಾನ್ ದಿವಸ್ ಎಂದು ಆಚರಿಸಲಾಗುವುದು ಎಂಬುದನ್ನು ಸಹ ಈ ಪಾಠವನ್ನು ಮಾಡುವಾಗ ತಿಳಿಸಿದ್ದೆ.
ಅದು ಡಿಸೆಂಬರ್ ತಿಂಗಳು ಆದ್ದರಿಂದ ಶಶಾಂಕ್ ಮತ್ತು ಶಂತನು ಉಡುಪ ಇಬ್ಬರೂ ಬಂದು ‘ರೈತರ ದಿನವನ್ನು ದುಮ್ಮಳ್ಳಿಶಿವಮ್ಮ ಅವರ ಕೃಷಿ ಸಾಧನೆಯ ಬಗ್ಗೆ ತಿಳಿಯುವ ಮೂಲಕ ಆಚರಿಸೋಣವೇ ಸರ್?’ ಎಂದಾಗ ಆಗಬಹುದೆಂದು ಕೆ.ಸಿ.ಶಶಿಧರ್ ಸರ್‌ಗೆ ಪೋನ್ ಮಾಡಿ, ‘ದುಮ್ಮಳ್ಳಿಶಿವಮ್ಮ ಅವರನ್ನು ಒಂದಿಬ್ಬರು ಮಕ್ಕಳ ಜೊತೆಗೆ ಹೋಗಿ ಭೇಟಿಮಾಡೋಣ ಎಂದು ಅವರ ನಂಬರ್ ಸಿಗಬಹುದೆ?’ ಎಂದಾಗ ಅಗತ್ಯವಾಗಿ ಭೇಟಿಮಾಡಿ ಸಾಧ್ಯವಾದರೆ ವಿಡಿಯೋ ಮಾಡಿಕೊಳ್ಳಿ ಅನುಕೂಲ ಆಗಬಹುದು ಎಂದರು. ಹಾಗೇ ಆಗಲಿ ಎಂದು ದುಮ್ಮಳ್ಳಿಶಿವಮ್ಮ ಅವರಿಗೆ ಪೋನ್ ಮಾಡಿ ‘ಪಾಠದಲ್ಲಿ ನಿಮ್ಮ ಸಾಧನೆಯ ಬಗ್ಗೆ ಓದಿದ್ದೇವೆ, ನಿಮ್ಮನ್ನು ಭೇಟಿಯಾಗಿ ಮಾತನಾಡಬಹುದೆ?’ ಎಂಬ ವಿಷಯ ತಿಳಿಸಿದಾಗ ‘ಧಾರಾಳಬನ್ನಿ ಎಂದರು’. ಶಾಲೆಯ ಮುಖ್ಯೋಪಾಧ್ಯಾಯರಿಗೆ ಈ ವಿಚಾರ ತಿಳಿಸಿದೆವು. ಆಗಲಿ ಹುಷಾರಾಗಿ ಹೋಗಿಬನ್ನಿ ಎಂದು ತಿಳಿಸಿದರು. ಶನಿವಾರ ಅರ್ಧದಿನದ ತರಗತಿ ಮುಗಿಸಿಕೊಂಡು ಸಂಜೆಗೆ ಹೊರಡಲು ಸಿದ್ದರಾದೆವು.

sri krishnadevaraya hampi

ಇಬ್ಬರೂ ಸೈಕಲ್‌ನಲ್ಲಿ ನಮ್ಮ ಮನೆಗೆ ಬಂದರು ‘ಸೈಕಲ್‌ನಲ್ಲಿ ಕಷ್ಟವಾಗಬಹುದು ನಿಮ್ಮಸೈಕಲ್ ಇಲ್ಲಿಯೇ ಬಿಟ್ಟು ನನ್ನ ಗಾಡಿಯಲ್ಲಿ ಬನ್ನಿ’ ಎಂದು ಇಬ್ಬರನ್ನೂ ನನ್ನ ಗಾಡಿಯಲ್ಲಿ ಕೂರಿಸಿಕೊಂಡು ಹೊರಟದ್ದಾಯಿತು. ದಾರಿಯಲ್ಲಿ ಅಪ್ಪಿತಪ್ಪಿ ಯಾರಾದರೂ ಸಿಕ್ಕು ಮೂರುಜನ ಒಂದೇ ಗಾಡಿಯಲ್ಲಿ? ಎಂದು ಕೇಳಿದರೆ ಎಂಬ ಹೆದರಿಕೆಯಿಂದ, ಬಹಳ ಜಾಗರೂಕರಾಗಿ ಹೊರಟೆವು. ಶಿವಮೊಗ್ಗದಿಂದ ಭದ್ರಾವತಿ ಮಾರ್ಗದಲ್ಲಿ ಶುಗರ್‌ಫ್ಯಾಕ್ಟರಿ ಎದುರಿಂದ ೪.ಕಿ.ಮಿ ದೂರದಲ್ಲಿ ‘ದುಮ್ಮಳ್ಳಿ’ ಎಂದು ನೋಡಿದ್ದಾಯಿತು. ದುಮ್ಮಳ್ಳಿಗೆ ಹೋಗಿ ಅಲ್ಲಿ, ‘ದುಮ್ಮಳ್ಳಿಶಿವಮ್ಮ ಅವರ ಮನೆ ಎಲ್ಲಿ?’ ಎಂದಾಗ ಅಲ್ಲಿನ ಒಬ್ಬರು ಮುಂದಿನ ರಸ್ತೆಯ ಕೊನೆಯ ಮನೆಯೇ ಅವರದ್ದು ಎಂದರು, ಧನ್ಯವಾಗದಗಳನ್ನು ತಿಳಿಸಿ ಹೊರಟೆವು, ಅವರ ಮನೆಯನ್ನು ತಲುಪಿದೆವು. ವಿನಮ್ರವಾಗಿ ಸ್ವಾಗತಿಸಿದರು. ಕ್ಯಾಮರಾ ತೆಗೆದುಕೊಂಡು ಹೋಗಿದ್ದ ನಾವು ಅವರೊಂದಿಗೆಗೆ ಪುಟ್ಟ ಸಂದರ್ಶನವನ್ನೂ ನಡೆಸಿದೆವು. ಕೇವಲ ಒಂದನೇ ತರಗತಿ (ಅದೂ ಕೂಡ ಪೂರ್ಣಗೊಳಿಸಲಿಲ್ಲ) ತನ್ನ ವಿಧ್ಯಾಭ್ಯಾಸ ಎಂದರು. ಆದರೆ ಕೃಷಿಯ ಬಗ್ಗೆ ಹಲವಾರು ವಿಶ್ವವಿದ್ಯಾಲಯಗಳಲ್ಲಿ, ದೇಶದ ಹಲವುಕಡೆಗಳಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಯಾವುದೇ ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗಲಿಲ್ಲ ಅವುಗಳೇ ಇವರನ್ನು ಹುಡುಕಿಕೊಂಡು ಬಂದದ್ದು ಎಂಬುದನ್ನು ನೋಡಿ ತಿಳಿದೆವು. ಕೃಷಿಯ ಬಗ್ಗೆ, ಇವರ ಬಾಲ್ಯ, ಸಾವಯವ ಬೇಸಾಯ, ಎಡೆಕುಂಟೆ ಹೀಗೆ ಹಲವಾರು ಕೆಲಸಗಳನ್ನು ನಿಭಾಯಿಸಿದ ರೀತಿಯನ್ನು ತಿಳಿಸಿದರು. ಎರೆಹುಳು ಸಾಕಣೆ, ಎರೆಗೊಬ್ಬರದ ಬಗ್ಗೆ ಅಪಾರ ಅನುಭವ ಹೊಂದಿದ್ದವರು. ನಾವು ಎರೆಹುಳು ಸಾಕಣೆಯನ್ನು ನೋಡಬಹುದೆ? ಎಂದಾಗ ತೋಟದಲ್ಲಿ ಮಾತ್ರವಲ್ಲ, ಮನೆಯ ಹಿಂಭಾಗದಲ್ಲೂ ಇದೆ ಎಂದರು ನಾವೇ ಹೋದೆವು.

ಎರೆಹುಳು ಸಾಕಣೆ ತೊಟ್ಟಿಯನ್ನು ನೋಡುತ್ತಿದ್ದೆವು. ಶಶಾಂಕ್ ವಿಡಿಯೋ ಮಾಡಲು ಮುಂದಾದನು ಪಾಠದಲ್ಲಿದ್ದ ಎರೆಹುಳುವಿನ ಬಗ್ಗೆ ಹೇಳುತ್ತಾ ಕೈಯಲ್ಲಿ ಅವುಗಳನ್ನು ಹಿಡಿದು ತೋರಿಸಿದೆವು. ಪಕ್ಕದಲ್ಲಿದ್ದ ಎರೆಗೊಬ್ಬರವನ್ನು, ಕೊಟ್ಟಿಗೆಯಲ್ಲಿದ್ದ ಹಸುಕರುಗಳಿಗೆ ಮೇವು ತಿನ್ನಿಸಿ, ಗೋಬರ್‌ಗ್ಯಾಸ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಂಡು ಅವೆಲ್ಲವುಗಳನ್ನು ವಿಡಿಯೋ ಮಾಡಿದ್ದಾಯಿತು. ಶಿವಮ್ಮನವರೊಡನೆ ಮಾತಾಡಿದ್ದು ಬಹಳಷ್ಟು ವಿಚಾರಗಳನ್ನು ತಿಳಿಯಲು ಅವಕಾಶವಾಯಿತು. ಅಲ್ಲದೇ ತನ್ನ ಬಗ್ಗೆ ಪುಸ್ತಕದಲ್ಲಿ ಇರುವ ವಿಚಾರ ತನಗೆ ತಿಳಿದೇ ಇರಲಿಲ್ಲವೆಂದು, ಶಾಲೆಯ ಮಕ್ಕಳ ಜೊತೆಯಲ್ಲಿ ಬಂದು ಹೀಗೆ ಮಾತನಾಡಿದ್ದು ತಮಗೆ ಖುಷಿಯಾಯ್ತು ಎಂದು ತಿಳಿಸಿದರು. ಸಮಯ ಕಳೆದದ್ದೇ ತಿಳಿಯಲಿಲ್ಲ, ಅವರೇ ಮಾಡಿಕೊಟ್ಟ ಬೆಲ್ಲದ ಪಾನಕವನ್ನು ಕುಡಿದು, ಎಲ್ಲರೂ ಸೇರಿ ಒಂದು ಫೋಟೋ ತೆಗೆದುಕೊಂದು ಹೊರಟೆವು. ಬಿಡುವಾಗಾದಲೆಲ್ಲ ಬನ್ನಿ ಎಂದು ಅವರಾಡಿದ ಮಾತು ಸಂತೋಷ ನೀಡಿತು. ದುಮ್ಮಳ್ಳಿ ಇಂದ ಶಿವಮೊಗ್ಗ ಮಾರ್ಗ ಮಧ್ಯೆ ಇರುವ ಗ್ರಾಮೀಣ ಪರಿಸರ, ಹೊಲ-ಗದ್ದೆ-ತೋಟಗಳು ನಮ್ಮನ್ನು ಆಕರ್ಷಿಸಿತು. ಅಲ್ಲಿಯೂ ಒಂದಿಷ್ಟು ಪೋಟೋ ತೆಗೆದುಕೊಂಡು ಮನೆಗೆ ಬಂದೆವು.
ಶಿವಮ್ಮನವರ ಜೊತೆಗಿನ ಮಾತುಕತೆಯ ವಿಡಿಯೋ ಒಂದನ್ನು ಶಂತನು ಮನೆಯಲ್ಲಿ ಸಿದ್ದಪಡಿಸಿ ಶಾಲೆಯಲ್ಲಿ ತರಗತಿಯನ್ನು ತೆಗೆದುಕೊಳ್ಳುವಾಗ ಎಲ್ಲರಿಗೂ ಲ್ಯಾಬ್‌ಗೆ ಬನ್ನಿ ಎಂದು ತಿಳಿಸಿ ಅಲ್ಲಿ ವಿಡಿಯೋ ಪ್ರದರ್ಶನಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿದ್ದೆವು. ‘ಪುಸ್ತಕದ ಪಾಠದಲ್ಲಿದ್ದ ರೈತ ಮಹಿಳೆ ದುಮ್ಮಳ್ಳಿಶಿವಮ್ಮ ಅವರ ಹೆಚ್ಚಿನ ಮಾಹಿತಿ ತಿಳಿಯುವ ಆಸಕ್ತಿಯಾರಿಗಾದರೂ ಇದೆಯಾ?’ ಎಂದರೆ ಎಲ್ಲರೂ ಹೌದು ಎಂದರು. ಅವರ ಜೊತೆಗಿನ ಸಂದರ್ಶನ, ಎರೆಗೊಬ್ಬರ, ಎರೆಹುಳು ಸಾಕಣೆಯ ಬಗ್ಗೆ ವಿಡಿಯೋ ಮಾಡಿದ್ದೇವೆ. ಮಾತನಾಡದೇ ಸುಮ್ಮನೆ ನೋಡಿ ಎಂದು ವಿಡಿಯೋ ಪ್ರದರ್ಶನ ಮಾಡಿದೆವು. ಮಕ್ಕಳಿಗೆಲ್ಲ ಆಶ್ಚರ್ಯ ಪಾಠದಲ್ಲಿದ್ದವರು ಇವರೇನಾ? ಇವರ ಬಗ್ಗೆಯೇ ಓದಿದ್ದಾ? ಅವರ ಅನುಭವಗಳನ್ನು ಅವರ ಬಾಯಿಂದಲೇ ಕೇಳಿ ತಿಳಿದದ್ದು ಬಹಳ ಖುಷಿ ನೀಡಿದ್ದಂತೂ ಸುಳ್ಳಲ್ಲ.

ಕೆಲವರು ನಮ್ಮನ್ನು ಕರೆದುಕೊಂಡು ಹೋಗಬಹುದಿತ್ತಲ್ಲ ಸಾರ್? ಕರೆದಿದ್ದರೆ ನಾವೂ ಬರ್ತಾಇದ್ವಿ, ಹಾಗೇಹೀಗೆ ಎಂದರು. (ಇಬ್ಬರನ್ನು ಕರೆದುಕೊಂದು ಹೋಗಿದ್ದೇ ದೊಡ್ಡ ವಿಷಯ, ಎಲ್ಲರನ್ನೂ ಕರೆದುಕೊಂಡು ಹೋಗೋದಾಗಿದ್ದರೆ ಪಿಕ್‌ನಿಕ್ ಆಗಿರೋದು) ಎಲ್ಲರಿಗೂ ಏನೋ ಒಂದು ಸಮಜಾಯಿಷಿ ಕೊಟ್ಟು ಅಂತೂ ತರಗತಿಯೊಂದನ್ನು ವಿಶೇಷವಾಗಿ ಮಾಡಿಮುಗಿಸಿದೆವು.
ಪಾಠಮಾಡುವಾಗ ಕಲ್ಪನೆ ಕಟ್ಟಿಕೊಡಬಹುದು. ಆದರೆ ಪಾಠದಲ್ಲಿರುವವರೇ ಅವರ ವಿಚಾರಗಳನ್ನು ತಿಳಿಸಿದಾಗ ಅದು ಬೀರುವ ಪರಿಮಾಣ ವಿಶೇಷವೇ ಸರಿ. ಅಂತಹ ಒಂದು ತರಗತಿ ಆದದ್ದು ಎಲ್ಲರಿಗೂ ಮರೆಯಲಾರದ್ದು ಎನ್ನುವಲ್ಲಿ ಅನುಮಾನವೇ ಇಲ್ಲ…

Contact us for classifieds and ads : +91 9742974234



 
error: Content is protected !!