Latest News

ಒಳಚರಂಡಿ ನೀರು ಕಾಲುವೆ ಸೇರದಂತೆ ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಸಿ: ಶಾಸಕ ಜಿಟಿಡಿ

ಲಿಂಗಾಂಬುದಿಕೆರೆಗೆ ಹರಿಯುವ ಯುಜಿಡಿ ನೀರು ತಡೆಗೆ ಶೀಘ್ರ ಶಾಶ್ವತ ಪರಿಹಾರ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆಗೆ ನಿರ್ಧಾರ

ಮೈಸೂರು:-  ಹಲವು ತಿಂಗಳುಗಳಿಂದ ಒಳಚರಂಡಿ ನೀರು ಹರಿಯುವ ಜತೆಗೆ, ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗಲಾಗದ ಸನ್ನಿವೇಶ ನಿರ್ಮಾಣವಾಗಿ ದುರ್ವಾಸನೆ ಮತ್ತಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮುಂದಾಗಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸುವ ಜತೆಗೆ, ಕಾಮಗಾರಿಗೆ ಬೇಕಾಗಿರುವ ಅನುದಾನದ ಕುರಿತು ಅಂದಾಜು ಪಟ್ಟಿಯನ್ನು ತಯಾರಿಸಿ ಸಲ್ಲಿಸುವಂತೆ ಸೂಚಿಸಲಾಯಿತು. ನಗರದ ದಟ್ಟಗಳ್ಳಿ ಕನಕದಾಸನಗರ ಎರಡನೇ ಹಂತದ ಕೌಟಿಲ್ಯ ಶಾಲೆಯ ಮಾರ್ಗದಲ್ಲಿ ಹರಿದು ಹೋಗುವ ಒಳಚರಂಡಿ ತಾಜ್ಯ ನೀರು,ಲಿಂಗಾಂಬುದಿಕೆರೆಗೆ ರಾಜಕಾಲುವೆ ಮೂಲಕ ಹರಿದು ಹೋಗುವ ಮಲೀನ ನೀರನ್ನು ತಡೆಯುವ ಕುರಿತಾಗಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಅಸಿಫ್, ಎಸಿಎಫ್ ರವೀಂದ್ರ, ಅಧೀಕ್ಷಕ ಅಭಿಯಂತರರಾದ ಮಂಜುನಾಥ್, ವಲಯ ಮೂರರ ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ ಅವರೊಂದಿಗೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳೊಂದಿಗೆ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿದರು. ಯುಜಿಡಿ ಮಾರ್ಗದ ಪೈಪ್‌ಲೈನ ಒಡೆದಿರುವ ಜಾಗ, ಸಂಜೆ ಹೊತ್ತು ಯುಜಿಡಿ ನೀರು ರಿವರ್ಸ್ ಅಕ್ಕಪಕ್ಕದ ಮನೆಗೆ ಎದುರಾಗುವ ಸಮಸ್ಯೆಗಳು, ಲಿಂಗಾಂಬುದಿಕೆರೆಯ ಒಳಗೆ ಆಗಬೇಕಿರುವ ಕೆಲಸಗಳನ್ನು ವೀಕ್ಷಿಸಿದರು. ಈ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಸಮಾಲೋಚನೆ ನಡೆಸಿದರು.

ರಾಜಕಾಲುವೆಯಲ್ಲಿ ಮಳೆ ನೀರು ಹರಿದುಹೋಗುವಂತೆ ಮಾಡಿದರೆ ಕೆರೆಗೆ ಸಮಸ್ಯೆ ಇರುವುದಿಲ್ಲ. ಕೆಲವು ಕಡೆ ಯುಜಿಡಿ ನೀರು ಹರಿಯುತ್ತಿರುವುದರಿಂದ ಸಮಸ್ಯೆಯಾಗಿದೆ.

ತಕ್ಷಣವೇ ಕ್ರಿಯಾಯೋಜನೆ ರೂಪಿಸಬೇಕು. ತಾತ್ಕಾಲಿಕ ಮತ್ತು ಶಾಶ್ವತವಾಗಿ ಆಗಬೇಕಿರುವ ಕೆಲಸಗಳ ಬಗ್ಗೆ ಪಟ್ಟಿ ಮಾಡಿ ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸಬೇಕು.ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಗರಪಾಲಿಕೆ, ಎಂಡಿಎ,ಅರಣ್ಯ ಇಲಾಖೆ ಮೊದಲಾದ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪರಿಹಾರ ಕಲ್ಪಿಸಲಾಗುವುದು ಎಂದರು. ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಲಿಂಗಾಂಬುದಿಕೆರೆಗೆ ಕಲುಷಿತ ನೀರು ಸೇರದಂತೆ ಕಾಮಗಾರಿ ಆರಂಭಿಸಲಾಗುವುದು. ಎಲ್ಲೆಲ್ಲಿ ಹೊಸದಾಗಿ ಪೈಪ್‌ಲೈನ್ ಅಳವಡಿಸಬೇಕು. ರಿಟೈನಿಂಗ್ ವಾಲ್ ಹಾಕಬೇಕು ಎಂಬುದರ ಬಗ್ಗೆ ಮಾಹಿತಿ ಪಡೆದು ತಕ್ಷಣವೇ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶಾಸಕರೆದುರು ಸಮಸ್ಯೆಗಳ ಬಿಚ್ಚಿಟ್ಟ ನಿವಾಸಿಗಳು

ಎಂ.ಎನ್.ನಟರಾಜು ಮಾತನಾಡಿ, ಕನಕದಾಸನಗರ,ದಟ್ಟಗಳ್ಳಿ ಭಾಗದಿಂದ ಬರುವ ಯುಜಿಡಿ ಲೈನ್ ಆಗಿಂದಾಗ್ಗೆ ಕಟ್ಟಿಕೊಳ್ಳುತ್ತದೆ. ರಾಜಕಾಲುವೆ ಬಳಿ ಹಾದು ಹೋಗಿರುವ ಪೈಪ್‌ಲೈನ್ ಒಡೆದುಹೋಗಿರುವ ಕಾರಣ ತ್ಯಾಜ್ಯ ನೀರು ಕೆರೆಗೆ ಸೇರುತ್ತಿದೆ. ಇದರಿಂದಾಗಿ ಅಕ್ಕಪಕ್ಕದ ಮನೆಗಳಿಗೆ ವಾಸನೆ ಬೀರುತ್ತಿದೆ. ರಾಜಕಾಲುವೆ ಬಳಿ ರಿಟೈನಿಂಗ್ ವಾಲ್ವ್‌ನ್ನು ಅಳವಡಿಸುವ ಜತೆಗೆ, ಕೆಲವು ಕಡೆ ಪೈಪ್‌ಲೈನ್ ಅಳವಡಿಸಬೇಕು ಎಂದು ಮನವಿ ಮಾಡಿದರು.

ನಿವಾಸಿಗಳಾದ ನಾಗೇಂದ್ರ ಮಾತನಾಡಿ,ಬೋಗಾದಿ,ಆನಂದನಗರ ಸೇರಿದಂತೆ ಇನ್ನಿತರಕಡೆಗಳಿಂದ ಹರಿದು ಬರುವ ನೀರು ನೇರವಾಗಿ ಎಡಿಬಿ ಲೈನ್ ಮೂಲಕ ರಾಯನಕೆರೆಗೆ ಹೋಗುವಂತೆ ಮಾಡಬೇಕು. ರಾಜಕಾಲುವೆಗೆ ಕೆಲವು ಕಡೆ ಸೇರುವುದರಿಂದ ತುಂಬಾ ಸಮಸ್ಯೆಯಾಗಿದೆ. ಲಿಂಗಾಂಬುದಿಕೆರೆಗೆ ಕಲುಷಿತ  ನೀರು ಸೇರುತ್ತಿರುವುದರಿಂದ ವಾಯುವಿಹಾರಿಗಳಿಗೆ ತುಂಬಾ ತೊಂದರೆಯಾಗಿದೆ. ಕೆಲವು ಮರಗಳು ಒಣಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಮೊದಲು ಚರಂಡಿ ನೀರು ರಾಜಕಾಲುವೆಗೆ ಸೇರದಂತೆ ತಡೆಗಟ್ಟಬೇಕು ಎಂದು ಒತ್ತಾಯಿಸಿದರು. ರಾಜಕಾಲುವೆಯಲ್ಲಿ ಸರಾಗವಾಗಿ ನೀರು ಹರಿಯುವಂತೆ ಮಾಡಿ ಚರಂಡಿ ನೀರು ಹೋಗಲು ಪೈಪ್‌ಲೈನ್ ಅಳವಡಿಸಬೇಕಿದೆ.  ವಾಕಿಂಗ್ ಪಾತ್‌ಗಳನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಾವು ಏನಾದರೂ ಹೇಳಿದರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಎಂಡಿಎ ಅಥವಾ ನಗರಪಾಲಿಕೆ ಅಧಿಕಾರಿಗಳನ್ನು ಕೇಳಿದರೆ ಅರಣ್ಯ ಇಲಾಖೆಯವರು ಜೆಸಿಬಿಯಲ್ಲಿ ಕೆಲಸ ಮಾಡುವುದಕ್ಕೆ ಬಿಡಲ್ಲ ಎನ್ನುತ್ತಾರೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೆರೆಯಲ್ಲಿ ಸ್ಯಾಂಪಲ್ ನೀರನ್ನು ತೆಗೆದುಕೊಂಡು ಹೋದರೂ ಕೂಡ ಸ್ಯಾಂಪಲ್ ನೋಡುತ್ತಿದ್ದಾರೆಯೇ,ಟೇಸ್ಟ್ ನೋಡುತ್ತಿದ್ದಾರೆಯೇ ಗೊತ್ತಾಗುತ್ತಿಲ್ಲ ಎಂದು ಶಾಸಕರಿಗೆ ಬಿಡಿಸಿಟ್ಟರು.ಮತ್ತೊಬ್ಬ ನಿವಾಸಿ ರಾಜು ಮಾತನಾಡಿ, ರಾತ್ರಿ ಹೊತ್ತು ವಾಸನೆ ಬರುತ್ತದೆ. ಬೆಳಿಗ್ಗೆ ವಾಕಿಂಗ್ ಮಾಡಲಾಗದು. ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲಾಗುತ್ತಿಲ್ಲ. ಕೆರೆಯ ಅಕ್ಕಪಕ್ಕ ಬೆಳೆದಿರುವ ಗಿಡಗಳನ್ನು ತೆಗೆಸಬೇಕು ಎಂದು ಶಾಸಕರಿಗೆ ಕೋರಿದರು. ಇದೇ ರೀತಿ ಅನೇಕ ನಿವಾಸಿಗಳು ಶಾಸಕರಿಗೆ ಹಲವಾರು ಸಮಸ್ಯೆಗಳನ್ನು ಬಿಡಿಸಿಟ್ಟರು. ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲರ ಮನವಿ ಆಲಿಸಿದ ಶಾಸಕರು, ಆಯುಕ್ತರೊಂದಿಗೆ ಸ್ಥಳ ಪರಿಶೀಲನೆ ನಡೆಸಿ  ಸುಮ್ಮನಾಗುವುದಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಪಾಲಿಕೆ ಪಾರ್ಕ್ ಖಾಸಗಿ ಶಾಲೆಯ ಆಟದ ಮೈದಾನವಾಗಿ ಬಳಕೆ – ಸಾರ್ವಜನಿಕರಿಂದ ದೂರು

ಲಿಂಗಾಬೂದಿಕೆರೆಗೆ ಹೊಂದಿಕೊಂಡಂತೆ ಇರುವ ಪಾರ್ಕ್ ನ್ನು ಖಾಸಗಿ ಶಾಲೆಯವರು ಆಟದ ಮೈದಾನ ಹಾಗೂ ಶಾಲೆಯ ವಾಹನಗಳ ನಿಲುಗಡೆಗೆ ಬಳಕೆ ಮಾಡಿಕೊಳ್ಳುತ್ತಿದ್ದು, ಶೀಘ್ರವಾಗಿ ಪಾರ್ಕ್ ಅನ್ನು  ಪಾರ್ಕ್ ಆಗಿ ಬಳಕೆ ಮಾಡುವಂತೆ ಸ್ಥಳೀಯ ನಿವಾಸಿಗಳು ದೂರು ನೀಡಿದರು. ಕೂಡಲೇ ತೆರವುಗೊಳಿಸುವುದಾಗಿ ಪಾಲಿಕೆ ಆಯುಕ್ತರು ತಿಳಿಸಿದರು.

ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಅಧೀಕ್ಷಕ ಅಭಿಯಂತರ ಮಂಜು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಆಸೀಫ್ ಇಕ್ಬಾಳ್ ಖಲೀಲ್, ನಗರಪಾಲಿಕೆ ಒಳಚರಂಡಿ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಶಿಲ್ಪಾ, ಎಇಇ ಧನುಷ್, ಎಇಇ ಶ್ರೀನಿವಾಸ್, ಅಶ್ವಿನ್ ಮತ್ತಿತರರು ಹಾಜರಿದ್ದರು.

Contact us for classifieds and ads : +91 9742974234