Articles

“ಪ್ರಪಂಚದ ಪ್ರಾಚೀನ ಭಾಷೆ ನಮ್ಮ ಕನ್ನಡ”

- ಲಕ್ಷ್ಮಿ ಕಿಶೋರ್ ಅರಸ್, ಯುವಕವಿ ಹಾಗೂ ಲೇಖಕರು.

ಕನ್ನಡ ಪ್ರಪಂಚದ ಆಡುಭಾಷೆಗಳಲ್ಲಿ ಅತ್ಯಂತ ಸುಮಧುರ, ಸುಲಲಿತವಾದ ಭಾಷೆ. ಕನ್ನಡವು “ಸುಲಿದ ಬಾಳೆಹಣ್ಣಿನಂತೆ, ರಸಭರಿತ ಕಬ್ಬಿನಂತೆ” ಎಂದು ಕವಿಗಳು ಹೇಳಿದ್ದಾರೆ. ಎಂದರೆ ಅದು ಸುಲಿದ ಬಾಳೆಹಣ್ಣಿನಷ್ಟು ಸುಲಲಿತ ಎಂಬುದನ್ನು ಕಾಣಬಹುದು. ಪ್ರಪಂಚದ ಹಳೆಯ ಭಾಷೆಗಳಲ್ಲಿ ಕನ್ನಡವೂ ಸಹ ಒಂದು. ಭಾರತದ ಪುರಾತನ ಭಾಷೆಗಳ ಸಾಲಿನಲ್ಲಿ ಕನ್ನಡ ಅಗ್ರಸ್ಥಾನ ಪಡೆದುಕೊಂಡಿದೆ.

sri krishnadevaraya hampi

“ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು ಕಾಮನಬಿಲ್ಲನು ಕಾಣುವ ಮೈದೊಡೆ ತಕ್ಕನೆ ಮನ ಮೈ ನಿಮಿರುವುದು”

ಕವಿ ಪಂಚ ಮಂಗೇಶರಾಯರ ವಾಕ್ಯವಿದು. ಕನ್ನಡವೆಂದರೆ ಕುಣಿದಾಡುವ, ಕಿವಿ ನಿಮಿರುವ ಭಾಷೆ ಕಾಮನಬಿಲ್ಲಲ್ಲು ಸಹ ಕರ್ನಾಟಕದ ಬಣ್ಣವಿದೆ. ಪ್ರಕೃತಿಯೂ ಸಹ ಕನ್ನಡವನ್ನೇ ಮಾತನಾಡುತ್ತದೆ, ಕನ್ನಡವನ್ನು ಆರಾಧಿಸುತ್ತದೆ ಎಂಬುದವರರ್ಥ. ಹಾಗೆ ನೋಡಿದರೆ ಖಗ- ಮೃಗಗಳ ಆಡುಭಾಷೆಯೂ ಸಹ ಕನ್ನಡವೇ ಆಗಿದೆ. ಕಾಗೆ ಪ್ರಪಂಚದ ಎಲ್ಲಾ ದೇಶಗಳಲ್ಲೂ ಕಾಕಾ ಎನ್ನುತ್ತದೆ, ಹಸು ಅಂಬಾ ಎನ್ನುತ್ತದೆ, ಕೋಗಿಲೆ ಚಿಕ್ಕವ್ವ ಎನ್ನುತ್ತದೆ ಇವೆಲ್ಲವೂ ಆಂಗ್ಲ, ಫ್ರೆಂಚ್, ಜರ್ಮನಿ, ಜಪಾನ್, ಚೈನಿ, ಉರ್ದು ಮುಂತಾದ ಭಾಷೆಗಳಲ್ಲಿ ಏಕೆ ಕೂಗುವುದಿಲ್ಲ. ಖಗ- ಮೃಗಗಳಿಗೂ ಸಹ ಕರ್ನಾಟಕವೇ ಪ್ರಿಯ, ಕನ್ನಡವೇ ಉಸಿರಾಗಿದೆ.

ಸಾವಿರಾರು ವರ್ಷಗಳ ಇತಿಹಾಸವುಳ್ಳ ಪ್ರಾಚೀನ ಭಾಷೆ:
ಕರ್ನಾಟಕ ಹಾಗೂ ಕನ್ನಡ ಭಾಷೆ, ಲಿಪಿ ,ಸಂಸ್ಕೃತಿ ,ವೈಭವಕ್ಕೆ ಸುಮಾರು 2000ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಕನ್ನಡ ನಾಡು-ನುಡಿಯನ್ನು ಕಟ್ಟಿ ಬೆಳೆಸುವುದರಲ್ಲಿ ಹಲವಾರು ಮಹನೀಯರ ಕೊಡುಗೆ ಅಪಾರವಾಗಿದೆ. ಹಲವಾರು ರಾಜವಂಶಗಳು ,ಸಾಮ್ರಾಜ್ಯಗಳು ಕನ್ನಡನಾಡನ್ನು ಆಳಿ ಇದರ ಇತಿಹಾಸ, ಸಂಸ್ಕೃತಿ ಹಾಗೂ ಬೆಳವಣಿಗೆಗೆ ಕಾರಣರಾಗಿದ್ದಾರೆ. ಕನ್ನಡ ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ, ವಿಶ್ವದ ನಾನಾ ಪ್ರದೇಶಗಳಲ್ಲಿ ಕನ್ನಡ ಭಾಷೆಯ ಲಿಪಿಗಳು ದೊರೆತಿವೆ. ಇದು ಕನ್ನಡದ ಪ್ರಾಮುಖ್ಯತೆಯನ್ನು ಸಾಬೀತುಪಡಿಸುತ್ತದೆ. ದ್ರಾವಿಡಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯು ಭಾರತದ ಪುರಾಣ ಭಾಷೆಗಳಲ್ಲಿ ಒಂದಾಗಿರುವ ಕನ್ನಡ ಭಾಷೆಯನ್ನು ಪ್ರಪಂಚದಾದ್ಯಂತ ಬಳಸುತ್ತಿದ್ದು, ಜಗತ್ತಿನಲ್ಲಿ ಅತಿ ಹೆಚ್ಚು ಜನ ಬಳಸುವ 29ನೇ ಆಡುಭಾಷೆ ಎಂಬ ಸ್ಥಾನ ಕನ್ನಡಕ್ಕಿದೆ. ಬ್ರಾಹ್ಮಿಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ರಚಿಸಲಾಗಿದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಹರಪ್ಪದಲ್ಲಿ ಭೂಶೋಧನೆಯಿಂದ ದೊರೆತ ಹರಪ್ಪ ನಾಗರಿಕತೆಯ ಚಿನ್ನದ ನಾಣ್ಯಗಳು ಕರ್ನಾಟಕದ್ದು ಎಂಬುದು ಸಾಬೀತಾಗಿದೆ. ಪ್ರಾಚೀನ ಕಾಲದಲ್ಲಿಯೇ ಕನ್ನಡವಿತ್ತು ಹರಪ್ಪ ನಾಗರಿಕತೆಗೆ ಕನ್ನಡದ ಮಣ್ಣಿನ ಚಿನ್ನ ಬಳಕೆಯಾಗಿದೆ ಎಂದರೆ ನಮ್ಮ ನಾಡು ಇನ್ನೆಷ್ಟು ಸಂಪತ್ಭರಿತವಾದ ನಾಗರಿಕತೆಯನ್ನು ಹೊಂದಿತ್ತು ಎಂಬುದನ್ನು ತಿಳಿಯಬಹುದಾಗಿದೆ. ಕ್ರಿಸ್ತಪೂರ್ವ 3000 ದಲ್ಲಿ ಕರ್ನಾಟಕ ಹಾಗೂ ಸಿಂಧೂ ಕಣಿವೆಯ ನಾಗರಿಕತೆಗೆ ಸಂಬಂಧಿಸಿದಂತೆ ಸಂಬಂಧವಿರುವುದನ್ನು ಇತಿಹಾಸ ತಜ್ಞರು ತಿಳಿಸಿದ್ದಾರೆ.

ಹಲ್ಮಿಡಿ ಶಾಸನ, ಇತ್ತೀಚೆಗೆ ದೊರೆತ ತಾಳಗುಂದ ಶಾಸನ ಹಾಗೂ ಬನವಾಸಿಯಲ್ಲಿ ದೊರೆತ ತಾಮ್ರದ ನಾಣ್ಯಗಳು ಇದಕ್ಕೆ ಸಾಕ್ಷಿಯಾಗಿದೆ. ಕೇವಲ ಸನ್ನೆಯಿಂದಲೇ ಎಲ್ಲಾ ಅಕ್ಷರಗಳನ್ನು ಸೃಷ್ಟಿಸಲಾಗಿದೆ ಎಂಬುದು ನಮ್ಮ ಕನ್ನಡ ಲಿಪಿಯ ವಿಶೇಷ .ಕನ್ನಡ ಭಾಷೆಗೆ ಪ್ರಪಂಚದ ಎಲ್ಲಾ ಭಾಷೆಗಳನ್ನು ತನ್ನಲ್ಲಿ ಅಡಗಿಸಿಕೊಳ್ಳುವ ಶಕ್ತಿಯಿದೆಯೆಂದು ಕುಮುದೇಂದುಮುನಿ ತನ್ನ ಗ್ರಂಥದಲ್ಲಿ ಸಾಬೀತುಪಡಿಸಿದ್ದಾರೆ. ಜೈನ ಧರ್ಮದ ಆದಿ ತೀರ್ಥಂಕರ ವೃಷಭದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಮತ್ತು ಸುಂದರಿಯರಿಗೆ ಕನ್ನಡ ಅಕ್ಷರಗಳನ್ನು ವಿವರಿಸಿದ ಕಾರಣ ಅಕ್ಷರ ಲಿಪಿಗೆ ಬ್ರಾಹ್ಮೀಲಿಪಿ ಎಂದು ಅಂಕ ಲಿಪಿಗೆ ಸುಂದರಿ ಲಿಪಿ ಎಂದು ಹೆಸರಾಗಿದೆ. ರಾಷ್ಟ್ರಕೂಟರ ಪ್ರಸಿದ್ಧ ದೊರೆ ಅಮೋಘವರ್ಷ ನೃಪತುಂಗನ ಆಸ್ಥಾನದಲ್ಲಿದ್ದ ಕವಿ ಶ್ರೀವಿಜಯನ ಕವಿರಾಜಮಾರ್ಗ ಕೃತಿಯಲ್ಲಿ” ಕರ್ನಾಟಕ ಕಾವೇರಿಯಿಂದ, ಗೋದಾವರಿ ವರೆಗೂ” ಹಬ್ಬಿತ್ತು ಎಂದು ತಿಳಿಸಲಾಗಿದೆ ಜರ್ಮನಿಯ ವಿದ್ವಾಂಸ ರೆವರೆಂಡ್ ಜಾರ್ಜ್ ಫರ್ಡಿನಾಂಡ್ ಕಿಟೆಲ್ ಕನ್ನಡ ಶಬ್ದಕೋಶ ರಚಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ, ವಿದೇಶಿಗರೂಬ್ಬರು ಭಾರತದ ಪ್ರಾದೇಶಿಕ ಭಾಷೆಗಳ ಶಬ್ದಕೋಶ ರಚಿಸಿರುವುದು ಕನ್ನಡಕ್ಕೆ ಹೆಗ್ಗಳಿಕೆಯ ವಿಷಯ. ಕನ್ನಡ ಭಾಷೆ ಮತ್ತು ವರ್ಣಮಾಲೆ ತಾರ್ಕಿಕವಾಗಿಯೂ, ವೈಜ್ಞಾನಿಕವಾಗಿಯೂ ಶೇಕಡ 99. 99% ರಷ್ಟು ಪರಿಪೂರ್ಣವಾದದ್ದು ಎಂಬುದು ಸಾಬೀತಾಗಿದೆ. ಸಾಹಿತ್ಯಕ್ಕಾಗಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಭಾರತೀಯರೆಂದರೆ ಅದು ನಮ್ಮ ಕನ್ನಡದ ರಸಋಷಿ ವಿಶ್ವಮಾನವ ಕವಿ ಕುವೆಂಪುರವರು. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಭಾಷೆಯೆಂದರೆ ಅದು ಕನ್ನಡ ಮಾತ್ರ. ಇಂದಿನ ತಂತ್ರಜ್ಞಾನ ಯುಗದಲ್ಲಿ ಆಧುನಿಕ ಸರ್ವಜ್ಞ ವಿಕಿಪೀಡಿಯಾವನ್ನು ದಿನಕ್ಕೊಮ್ಮೆಯಾದರೂ ನೋಡುತ್ತೇವೆ, ಮಾಹಿತಿ ಕಣಜವಾದ ಈ ವಿಕಿಪೀಡಿಯಾದಲ್ಲಿ ಕನ್ನಡದ “ವಿ” ಅಕ್ಷರವು ಸಹ ಇದೆ ಇದು ಕನ್ನಡಕ್ಕೆ ನಿಜವಾಗಿಯೂ ಹೆಮ್ಮೆಯ ವಿಷಯ. ಎರಡನೇ ಶತಮಾನದಲ್ಲಿ ಗ್ರೀಕ್ ವಿದ್ವಾಂಸನೊಬ್ಬನ ತನ್ನ ಬರಹದಲ್ಲಿ ಕನ್ನಡ ಭಾಷೆ ಬಳಸಿರುವ ಕುರುಹುಗಳಿವೆ. ಭಾರತ ಶಾಸ್ತ್ರೀಯ ಸಂಗೀತ ಪರಂಪರೆಯಲ್ಲಿ ಕರ್ನಾಟಕ ಸಂಗೀತ ಅಗ್ರಗಣ್ಯ ವಾಗಿದೆ. ಹಿಂದುಸ್ತಾನ ಸಂಗೀತಕ್ಕೆ ಕರ್ನಾಟಕದ ಕೊಡುಗೆ ಅಪಾರ. ಭಾರತ ಸ್ವತಂತ್ರ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು, ಮೈಸೂರು ಮಹಾರಾಜರಾದ” ಶ್ರೀ ಜಯಚಾಮರಾಜೇಂದ್ರ ಒಡೆಯರು” ರಾಜ್ಯದ ರಾಜಪ್ರಮುಖರಾದರು ಏಕೀಕರಣ ಚಳುವಳಿಯ ಬಹುಕಾಲದ ಬೇಡಿಕೆ ನಂತರ ನವಂಬರ್ 1 ,1956ರಂದು ರಾಜ್ಯ ಪುನರ್ ಸಂಘಟನೆ ಕಾಯ್ದೆಗನುಸಾರ ಮೈಸೂರು ರಾಜ್ಯದ ಸುತ್ತಲ ಕೊಡಗು, ಮದರಾಸು, ಹೈದರಾಬಾದ್, ಮಹಾರಾಷ್ಟ್ರ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳನ್ನು ಸೇರಿಸಿ “ವಿಶಾಲ ಮೈಸೂರು ರಾಜ್ಯ” ಅಸ್ತಿತ್ವಕ್ಕೆ ಬಂತು.

1973, ನವೆಂಬರ್ 1ರಂದು ಮೈಸೂರು ರಾಜ್ಯವನ್ನು ಅಂದಿನ ಮುಖ್ಯಮಂತ್ರಿ “ಡಿ.ದೇವರಾಜ ಅರಸರು” ಕರ್ನಾಟಕ ಎಂದು ನಾಮಕರಣ ಮಾಡಿದರು. ಕರ್ನಾಟಕ ಎಂಬ ಪದವನ್ನು ನೀಡಿದವರು ಕನ್ನಡ ಕುಲಪುರೋಹಿತ “ಆಲೂರು ವೆಂಕಟರಾಯರು” ಪ್ರತಿವರ್ಷ ನವೆಂಬರ್ 1.ರಂದು ವಿಶ್ವಾದ್ಯಂತ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತೇವೆ. ಇಂತಹ ವಿಶಿಷ್ಟವಾದ ಪುಣ್ಯ ನೆಲೆ ಕನ್ನಡ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು.

Contact us for classifieds and ads : +91 9742974234



 
error: Content is protected !!