
ಮೈಸೂರು:- ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಸೇವಾದಳ , ಮೈಸೂರು ಕಾಂಗ್ರೆಸ್ ಭವನದಲ್ಲಿ ಆಯೋಜನೆ ಮಾಡಿದ್ದ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ದೇವಾ ದಳದ ನಿಕಟಪೂರ್ವ ಅಧ್ಯಕ್ಷರಾದ ಕುಮಾರಿ ಪ್ಯಾರಿ ಜಾನ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ.ಬಿಜೆ ವಿಜಯಕುಮಾರ್ 1923ರಲ್ಲಿ ಸ್ಥಾಪನೆಯಾದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸೇವಾದಳ ತ್ಯಾಗ, ಬಲಿದಾನ, ಜಾತ್ಯತೀತತೆ, ಶಿಸ್ತು ಹಾಗೂ ಸಮಾನತೆಯ ಮೂಲ ಉದ್ದೇಶವನ್ನು ಹೊಂದಿದೆ. ಹಾಗೆಯೇ ಭಾರತ ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಕಾಂಗ್ರೆಸ್ ಸೇವಾದಳ ಪ್ರಮುಖ ಪಾತ್ರವಹಿಸಿ ಶಾಂತಿಯುತ ಹೋರಾಟಕ್ಕೆ ಮೂಲ ಪ್ರೇರಣೆಯಾಗಿತ್ತು.

ಆದರೆ 1925ರಲ್ಲಿ ಆರಂಭವಾದ ರಾಷ್ಟ್ರೀಯ ಸ್ವಯಂಸೇವಾ ಸಂಘ ದೇಶದ ಉದ್ದಗಲಕ್ಕೂ ಹಿಂದೂ ರಾಷ್ಟ್ರದ ನಿರ್ಮಾಣಕ್ಕೆ ಹಾಗೂ ಅದನ್ನು ಅತ್ಯಂತ ಸಮರ್ಥವಾಗಿ ಉತ್ತೇಜಿಸುವ ಬಹುದೊಡ್ಡ ಮೂಲ ಉದ್ದೇಶವನ್ನು ಹೊಂದಿತ್ತು. ಆರ್ ಎಸ್ ಎಸ್ ಇತಿಹಾಸದುದ್ದಕ್ಕೂ ಕಾಂಗ್ರೆಸ್ ಸೇವಾದಳಕ್ಕೆ ಭಿನ್ನವಾದ ನಿಲುವುಗಳೊಂದಿಗೆ ದೇಶದಲ್ಲಿ ಹೊಸ ಆಯಾಮವನ್ನು ಕಟ್ಟುವ ವಿಚಾರವಂತಿಕೆ ರೂಡಿಸಿಕೊಂಡು ಬಂತು. ಈಗ ಈ ಎರಡು ರಾಷ್ಟ್ರೀಯ ಸಂಘಟನೆಗಳಿಗೆ ವಿಷಯ ವಾಸ್ತವಿಕತೆಯ ನೆಲಗಟ್ಟಿನಲ್ಲಿ ಬಹುದೊಡ್ಡ ನಿರಂತರ ಭಿನ್ನತೆ ಆರಂಭವಾಗಿ 100 ವರ್ಷಗಳು ಕಳೆದಿದೆ ಎಂದರು.

ಭಾರತ ರಾಷ್ಟ್ರೀಯ ಕಾಂಗ್ರೆಸ್ ಗೆ ಕಾಂಗ್ರೆಸ್ ಸೇವಾದಳ ಮೂಲ ಸಂಘಟನೆಯ ಬೇರು. ಆದ್ದರಿಂದ ಕಾಂಗ್ರೆಸ್ ಪಕ್ಷ ಭಾರತ ಸಂವಿಧಾನದ ಮೂಲ ಆಶಯಗಳಿಗೆ ಬದ್ಧವಾಗಿ ದೇಶ ಮುನ್ನಡೆಸಿದರೆ , ಬಿಜೆಪಿ ಮಾತ್ರ ಅದರ ವಿರುದ್ಧ ದಿಕ್ಕಿನಲ್ಲಿ ಸಾಗಿದೆ. ರಾಜ್ಯ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕುಮಾರಿ ಪ್ಯಾರಿಜಾನ್ ದಕ್ಷಿಣ ಭಾರತದಲ್ಲಿ ಸುಮಾರು 40 ವರ್ಷಗಳ ಕಾಲ ಕಾಂಗ್ರೆಸ್ ಸೇವಾದಳದಲ್ಲಿ ಅತ್ಯಂತ ಯಶಸ್ವಿ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಸೇವಾದಳದ ಶಿಸ್ತು ಮತ್ತು ಬದ್ಧತೆ ದೇಶದ ರಾಜಕೀಯ ಪಕ್ಷಗಳಿಗೆ ಒಂದು ದೊಡ್ಡ ಮಾದರಿ. ಕಾಂಗ್ರೆಸ್ ಸೇವಾದಳದಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸಿದ ಪದಾಧಿಕಾರಿಗಳಿಗೆ ಪಕ್ಷ ಹೊಸ ಮೀಸಲಾತಿ ಆಧಾರದಲ್ಲಿ ಅಂತಹ ಹಿರಿಯ ಸಮರ್ಥ ಪದಾಧಿಕಾರಿಗಳಿಗೆ ಸರ್ಕಾರದಲ್ಲಿ ಉನ್ನತ ಸ್ಥಾನ ನೀಡುವುದು ತುರ್ತು ಅನಿವಾರ್ಯ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕುಮಾರಿ ಪ್ಯಾರಿಜಾನ್ ನಾನು ಮೈಸೂರಿನ ಮಗಳು, ರಾಷ್ಟ್ರದ ಉದ್ದಗಲಕ್ಕೂ ಕಾಂಗ್ರೆಸ್ ಸೇವಾದಳದಲ್ಲಿ ಸೇವೆ ಸಲ್ಲಿಸಿದ ನನಗೆ ಈ ಗೌರವ ಹೆಚ್ಚು ಹೆಮ್ಮೆ ತರಿಸಿದೆ. ಹಾಗೆಯೇ ಈ ಗೌರವಕ್ಕೆ ಕಾಂಗ್ರೆಸ್ ಸೇವಾದಳವೇ ಕಾರಣ. ಕಾಂಗ್ರೆಸ್ ಸೇವಾದಳದಲ್ಲಿ ಕೆಲಸ ಮಾಡಿದ ಕಾರಣದಿಂದಾಗಿ ನಾನು ಬೌದ್ಧಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಗಟ್ಟಿಯಾಗಿ ಪ್ರಾಮಾಣಿಕವಾಗಿ ಜೀವನ ನಡೆಸುತ್ತಿದ್ದೇನೆ ಎಂದರು. ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್ ಮೂರ್ತಿ ಅವರು ಕುಮಾರಿ ಪ್ಯಾರಿಜಾನ್ ಅವರು ಜಪಾನ್ ದೇಶದಲ್ಲಿ ಇದೇ ತಿಂಗಳು 26ರಂದು ನಡೆಯಲಿರುವ ವಿಶ್ವ ಯುವ ಸಮ್ಮೇಳದಲ್ಲಿ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ, ಇದು ದೇಶಕ್ಕೆ ಮಾದರಿ ಎಂದರು.

ಸಮಾರಂಭದಲ್ಲಿ ಮಾಜಿ ಮೇಯರಾದ ಚಿಕ್ಕಣ್ಣ, ಶ್ರೀಮತಿ ಮೂದಮಣಿ, ಸೇವಾದಳದ ಜಿಲ್ಲಾ ಅಧ್ಯಕ್ಷರಾದ ಶಾಮ. ಯೋಗೀಶ್, ನಗರ ಸೇವಾದಳದ ಅಧ್ಯಕ್ಷರಾದ ಅಶೋಕ್, ಕಾರ್ಯಾಧ್ಯಕ್ಷರಾದ ಮೋಹನ್,ಕಾಂಗ್ರೆಸ್ ಪದಾಧಿಕಾರಿಗಳಾದ ಈಶ್ವರ್ ಚೆಕ್ಕಡಿ, ಮಂಚೇಗೌಡನ ಕೊಪ್ಪಲು ರವಿ, ವೆಂಕಟಸುಬ್ಬಯ್ಯ, ಗೋಪಿನಾಥ್, ಸೋಮಶೇಖರ್, ಡೈರಿ ವೆಂಕಟೇಶ್, ರಾಮಚಂದ್ರು ಶಿವಶಂಕರಮೂರ್ತಿ, ರಾಮು, ರಾಜು, ಮುರುಡೇಶ್, ಮಹದೇವ್ , ಆರ್ ಎಚ್ ಕುಮಾರ, ಶ್ರೀಮತಿ ಲಲಿತಾ, ಇತರೆ ಪ್ರಮುಖರು ಭಾಗವಹಿಸಿದ್ದರು.



