ಮೈಸೂರು, ಫೆ.09:- ಜಿಲ್ಲಾ ಪಂಚಾಯತ್ ಮೈಸೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೈಸೂರು ಜಿಲ್ಲಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ವೃಂದ ಸಂಘಗಳ ಸಹಯೋಗದೊಂದಿಗೆ ಮೈಸೂರು ಜಿಲ್ಲಾ ಆರ್.ಡಿ.ಪಿ.ಆರ್. ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಫೆ. 12 ಮತ್ತು 13 ರಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಯುಕೇಶ್ಕುಮಾರ್ ತಿಳಿಸಿದರು.
ಜಿಲ್ಲಾ ಪಂಚಾಯತ್ನಲ್ಲಿ ಸೋಮವಾರ ಕ್ರೀಡಾಕೂಟದ ಲೋಗೋ ಹಾಗೂ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಅಥ್ಲೆಟಿಕ್ನಲ್ಲಿ 100 ಮೀ ಮತ್ತು 400 ಮೀ ಓಟದ ಸ್ಪರ್ಧೆ, ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ, ಪೆನಾಲ್ಟಿ ಶೂಟೌಟ್ (ಹಾಕಿ), ಮ್ಯೂಸಿಕಲ್ಚೇರ್, ಬಾಲ್ ಇನ್ದಿ ಬಾಸ್ಕೆಟ್, ಕ್ರಿಕೆಟ್, ಷಟಲ್ ಬ್ಯಾಡ್ಮಿಂಟನ್, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದಗೀತೆ, ಜನಪದ ನೃತ್ಯ, ವಾದ್ಯ ಸಂಗೀತ, ಭಾವಗೀತೆ ಕಾರ್ಯಕ್ರಮ ನಡೆಯಲಿದ್ದು ಪ್ರತಿಯೊಬ್ಬ ಕ್ರೀಡಾಸಕ್ತರು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪಕಾರ್ಯದರ್ಶಿ (ಆಡಳಿತ) ಸವಿತ ಬಿ.ಎಂ., ಉಪಕಾರ್ಯದರ್ಶಿ (ಅಭಿವೃದ್ಧಿ) ಭೀಮಪ್ಪ ಕೆ. ಲಾಳಿ, ಮುಖ್ಯಯೋಜನಾಧಿಕಾರಿ ಪ್ರಭುಸ್ವಾಮಿ ಕೆ., ಮುಖ್ಯ ಲೆಕ್ಕಾಧಿಕಾರಿ ಸಿದ್ದಗಂಗಮ್ಮ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ನಾಯಕ್, ಕಾರ್ಯಪಾಲಕ ಅಭಿಯಂತರರಾದ ವೀರೇಶ್, ಸಹಾಯಕ ನಿರ್ದೇಶಕ ವಿಶ್ವನಾಥ್, ಮೈಸೂರು ತಾ.ಪಂ. ಇಓ ಕೃಷ್ಣ ಸಿ., ಪಿಡಿಓ ಸಂಘದ ಜಿಲ್ಲಾ ಅಧ್ಯಕ್ಷ ಕಂಚಿನಕೆರೆ ರುಕ್ಮಾಂಗದ, ಪ್ರಕಾಶ್, ಪೂರ್ಣಿಮ, ಸೌಮ್ಯಲತಾ, ಮೊಹಮದ್ ಇಸಾಕ್ ಹಾಜರಿದ್ದರು.



