
ವರದಿ:- ಪಿರಿಯಾಪಟ್ಟಣ ಪ್ರಸನ್ನ.
ಪಿರಿಯಾಪಟ್ಟಣ, ಫೆ.16: ನಗರದ ಗೊಲ್ಲರ ಬೀದಿತಲ್ಲಿ ಕಿಡಿಗೇಡಿಗಳಿಂದ ರಾಗಿ ಹುಲ್ಲಿನ ಮೇದೆಗೆ ಬೆಂಕಿ ಹಚ್ಚಿದ ಪರಿಣಾಮ ಸಾವಿರಾರು ರೂಪಾಯಿ ಮೌಲ್ಯದ ಮೇವು ಸುಟ್ಟು ಭಸ್ಮವಾಗಿರುವ ಘಟನೆ ಪಿರಿಯಾಪಟ್ಟಣ ಪಟ್ಟಣದ ಗೊಲ್ಲರ ಬೀದಿಯಲ್ಲಿ ಭಾನುವಾರ ಮಧ್ಯರಾತ್ರಿ ಸಂಭವಿಸಿದೆ. ಈ ಘಟನೆಯಿಂದ ರೈತನಿಗೆ ತಮ್ಮ ಜಾನುವಾರುಗಳಿಗೆ ಮೇವು ಇಲ್ಲಾದಂತಾಗಿ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.

ಪಟ್ಟಣದ ನಿವಾಸಿ ಹಾಗೂ ರೈತ ರೇವಣ್ಣ ಅವರಿಗೆ ಸೇರಿದ ರಾಗಿ ಹುಲ್ಲಿನ ಮೆದೆಗೆ ಭಾನುವಾರ ರಾತ್ರಿ ಸುಮಾರು 2 ಗಂಟೆ ವೇಳೆಯಲ್ಲಿ ಯಾರೋ ಮಧ್ಯರಾತ್ರಿಯಲ್ಲಿ ಅಪರಿಚಿತರು ಬೆಂಕಿ ಹಚ್ಚಿರುವುದಾಗಿ ಕಂಡುಬಂದಿದೆ. ಬೆಂಕಿ ಹೆಚ್ಚಾಗಿ ವ್ಯಾಪಿಸಿ ರಾಗಿಮೆದೆ ಸಂಪೂರ್ಣವಾಗಿ ಹೊತ್ತಿ ಉರಿದ ಪರಿಣಾಮವಾಗಿ ಸುಮಾರು 200 ಪಿಂಡಿ ರಾಗಿ ಹುಲ್ಲು ಹಾಗೂ ಮೂರು ಟ್ರ್ಯಾಕ್ಟರ್ ತುಂಬಿದ ಜೋಳದ ಸಿಪ್ಪೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅಕ್ಕಪಕ್ಕದ ಸ್ಥಳೀಯರು ಮೆದೆಗೆ ಬೆಂಕಿ ಕಾಣಿಸಿಕೊಂಡ ತಕ್ಷಣ ಪಿರಿಯಾಪಟ್ಟಣ ಅಗ್ನಿಶಾಮಕ ಠಾಣೆಗೆ ಸುದ್ದಿ ತಿಳಿಸಿದರು.
ಬೆಂಕಿ ಬಿದ್ದ ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಬಿದ್ದ ಸ್ಥಳಕ್ಕೆ ಧಾವಿಸಿ ಬೆಂಕಿ ಅರಿಸುವ ಕಾರ್ಯಾಕ್ಕೆ ಮುಂದಾದರು. ತುಂಬಾ ಸಮಯದ ನಂತರ ರಾಗಿ ಮೆದೆಗೆ ಬಿದ್ದಾ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಸುತ್ತಮುತ್ತಲಿನ ಮನೆಗಳು ಹಾಗೂ ಅಕ್ಕಪಕ್ಕದಲ್ಲಿ ಕೂಡಿ ಇಟ್ಟ ಮೇವುಗೆ ಹಾನಿಯಾಗುವುದನ್ನು ತಪ್ಪಿಸಲಾಯಿತು. ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾದ ಅತಿ ದೊಡ್ಡ ಬೆಂಕಿ ಅನಾಹುತ ತಪ್ಪಿದಂತಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಬೆಂಕಿ ಬಿದ್ದ ಘಟನೆಯ ಬಗ್ಗೆ ಮಾತನಾಡಿದ ರೈತ ರೇವಣ್ಣ, ತಾವು ಸುಮಾರು ಐದು ಎಕರೆ ಜಮೀನಿನಲ್ಲಿ ಬೆಳೆದಿದ್ದ ರಾಗಿ ಹುಲ್ಲು ಮತ್ತು ಮುಸುಕಿನ ಜೋಳವನ್ನು ಪಶುಗಳಿಗೆ ಮೇವು ರೂಪದಲ್ಲಿ ಸಂಗ್ರಹಿಸಿದ್ದಾಗಿ ತಿಳಿಸುದರು. ಆದರೆ ಕಿಡಿಗೇಡಿಗಳ ಈ ಕೃತ್ಯದಿಂದ ಅದು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿ ಸುಮಾರು 75 ಸಾವಿರ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಮೇವು ಸುಟ್ಟು ಹೋಗಿದೆ ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು. ರೈತರಿಗೆ ಇಂತಹ ಘಟನೆ ದೊಡ್ಡ ಪಶುಗಳನ್ನು ಸಾಕಲು ಹೊಡೆತವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಬೇಗನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ:- ಜೆಡಿಎಸ್ ಏಕಚಕ್ರಾಧಿಪತ್ಯಕ್ಕೆ ಸವಾಲು: ಕೆಆರ್ ನಗರ ರಾಜಕೀಯ ಕಾದಾಟ
ಅಲ್ಲಿನ ಸ್ಥಳೀಯರು ಕೂಡ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ರಾತ್ರಿ ವೇಳೆ ಇಂತಹ ದುಷ್ಕೃತ್ಯ ನಡೆಯುತ್ತಿರುವುದು ತುಂಬಾ ಆತಂಕಕಾರಿ ಸಂಗತಿ ಎಂದು ಹೇಳಿದ್ದಾರೆ. ಕಿಡಿಗೇಡಿಗಳನ್ನು ಅದಷ್ಟು ಬೇಗ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ರೈತರ ಆಸ್ತಿ ರಕ್ಷಣೆಗೆ ಪೊಲೀಸರು ಹೆಚ್ಚಿನ ಕಾವಲು ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಘಟನೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ. ಬೆಂಕಿ ಹಚ್ಚಿದವರ ಗುರುತು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಗ್ರಹಿಸಲಾದ ಮೇವು ಹಾಗೂ ಕೃಷಿ ಉತ್ಪನ್ನಗಳ ರಕ್ಷಣೆಗೆ ಮುನ್ನೆಚ್ಚರಿಕಾ ಕ್ರಮ ಅಗತ್ಯವಿದೆ ಎಂಬುದು ಈ ಘಟನೆಯಿಂದ ಸ್ಪಷ್ಟವಾಗಿದೆ.
ರೈತರಿಗೆ ಆರ್ಥಿಕವಾಗಿ ನೆರವಾಗುವ ಸಂಪತ್ತೇ ಆಗಿರುವ ಮೇವು ಬೆಂಕಿಗೆ ಆಹುತಿಯಾಗಿರುವುದು ದುಃಖಕರ ಸಂಗತಿಯಾಗಿದ್ದು, ಅಧಿಕಾರಿಗಳ ತ್ವರಿತ ಸ್ಪಂದನೆ ಹಾಗೂ ಪರಿಹಾರ ಕ್ರಮಗಳತ್ತ ಎಲ್ಲರ ಗಮನ ಹರಿದಿದೆ.
ಇದನ್ನೂ ಓದಿ:- ನಿಖಿಲ್ ಕುಮಾರಸ್ವಾಮಿ ಫೆ.18ರಿಂದ ಮೈಸೂರಿನಲ್ಲಿ ‘ಜನರೊಂದಿಗೆ ಜನತಾ ದಳ ಅಭಿಯಾನ ಆರಂಭ


