Articles

“ನನಗೆ ಅಕ್ಷರಗಳನ್ನು ಗುರುತಿಸಲು ಬರಲ್ಲ ಸಾರ್…”

- ಚೇತನ್ ಸಿ ರಾಯನಹಳ್ಳಿ

ಅದು 8ನೇ ತರಗತಿ. ಮಕ್ಕಳು ಬೇರೆಬೇರೆ ಶಾಲೆಗಳಿಂದ ಬಂದಿರುವವರು. ಹೊಸದಾದ ಶಾಲೆ, ಗೆಳೆಯರು, ಶಿಕ್ಷಕರು ಹಾಗಾಗಿ ಈ ವಾತಾವರಣಕ್ಕೆ ಹೊಂದಿಕೊಳ್ಳಲು ಒಂದಿಷ್ಟು ಸಮಯ ಖಂಡಿತವಾಗಿ ಬೇಕೇಬೇಕಿದೆ ಎಂಬುದು ನಮಗೆಲ್ಲ ತಿಳಿದಿರುವ ಅಂಶವೇ ಸರಿ. ಯಾವಯಾವ ಶಾಲೆಯಲ್ಲಿ ಹೇಗೇಗೆ, ಏನೇನು ಪಾಠಗಳನ್ನು ಮಾಡಿರುತ್ತಾರೋ ತಿಳಿಯದು. ತರಗತಿಯಲ್ಲಿರುವ ಒಂದೊಂದು ಮಗುವು ಭಿನ್ನ, ವಿಭಿನ್ನ. ಕೆಲವು ಮಕ್ಕಳು ಓದುವುದರಲ್ಲಿ, ಕೆಲವರು ಆಟೋಟಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇನ್ನೂ ಕೆಲವು ಓದುವುದರಲ್ಲೂ ಇಲ್ಲ ಯಾವುದರಲ್ಲೂ ಇಲ್ಲ. ಆದರೆ ಅವರ ವರ್ತನೆ ನೋಡಿದರೆ ಎಲ್ಲವನ್ನೂ ತಿಳಿದಿರುವ ಮಗು, ನಾವೇ ತಪ್ಪಾಗಿ ಆ ಮಗುವಿನ ಬಗ್ಗೆ ತಿಳಿದುಕೊಂಡಿದ್ದೇವೇನೋ ಅನ್ನಿಸುವಂತೆ ಇರುತ್ತದೆ. ಪ್ರತಿ ವರ್ಷದಂತೆ ಈಗಲೂ ಬಂದ ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಿ ತರಗತಿಗೆ ಬರಮಾಡಿಕೊಂಡು ಮೊದಲ ತರಗತಿಯಲ್ಲಿ ಮಗುವಿನ, ಅವರ ತಂದೆ-ತಾಯಿಯ ಹೆಸರು ಮತ್ತು ಮನೆಯ ವಿಳಾಸವನ್ನು ಬರೆಯಲು ಹೇಳಿದೆ. ಎಲ್ಲರೂ ಬರೆದರೂ ಅದನ್ನು ಗಮನಿಸುತ್ತಾ ಹೋದಾಗ ಬಹುತೇಕರು ಅಕ್ಷರಗಳು ತಪ್ಪಿಲ್ಲದೇ ಬರೆದಿದ್ದರು. ಇನ್ನೂ ಕೆಲವರು ತಮ್ಮ ಹೆಸರನ್ನೋ, ಪೋಷಕರ ಹೆಸರನ್ನೋ, ವಿಳಾಸವನ್ನೋ ಬರೆಯುವಾಗ ಅನೇಕ ಅಕ್ಷರಗಳನ್ನು ತಪ್ಪಾಗಿ ಬರೆದಿದ್ದನ್ನು ಗುರುತಿಸಿ ‘ಕನ್ನಡ ವರ್ಣಮಾಲೆ’ಯಿಂದ ತರಗತಿಯನ್ನು ಆರಂಭಿಸಿದ್ದಾಯಿತು.
ಸೇತುಬಂಧ ಪರೀಕ್ಷೆಗೆ ಒಂದಿಷ್ಟು ತಯಾರಿಯನ್ನು ಮಾಡಿದ್ದಾಯಿತು. ಇದಾದ ಮೇಲೆ ಪಾಠಪದ್ಯಗಳು ಎಂದಿನAತೆ ಆರಂಭವಾದವು ತರಗತಿಯಲ್ಲಿ ಪ್ರಶ್ನೆಗಳು, ಅದಕ್ಕೆ ಉತ್ತರಗಳು, ಅನುಮಾನಗಳು ಹೀಗೆ ಮಕ್ಕಳ ಜೊತೆಗೆ ತರಗತಿಗಳು ಸಾಗಿದವು. ಮೊದಲನೆ ಕಿರುಪರೀಕ್ಷೆ ಸಮಯವೂ ಬಂದಿತು ಪರೀಕ್ಷೆಯನ್ನು ಬರೆದರು. ಅವುಗಳ ಮೌಲ್ಯಮಾಪನವನ್ನು ಮಾಡಿದೆ ಅದರಲ್ಲಿ ಒಂದು ವಿಶೇಷ ಎನಿಸಿತು. ಕಾರಣ ‘ಅನೇಕ ಉತ್ತರಗಳಿಗೆ ಎರಡು, ಮೂರು ಪ್ರಶ್ನೆಗಳನ್ನೇ ಉತ್ತರವಾಗಿ ಬರೆದಿದ್ದು’.. ಇದ್ಯಾವುದೊ ವಿಶೇಷವಾಗಿ ಸಿಕ್ತಲ್ಲ, ತರಗತಿಯಲ್ಲಿ ವಿಚಾರಿಸಿಕೊಳ್ಳುವ ಅನ್ಕೊಂಡೆ. ಮರುದಿನ ಉತ್ತರ ಪತ್ರಿಕೆಗಳನ್ನು ತರಗತಿಗೆ ತೆಗೆದುಕೊಂಡು ಹೋದೆ, ಕೆಲವರಿಗೆ ಭಯ, ಕುತೂಹಲ. ಎಲ್ಲಾ ಪ್ರಶ್ನೆಗಳಿಗೂ ಸರಿಯಾದ ಉತ್ತರ ತಿಳಿಸಿ ಪ್ರತಿಯೊಬ್ಬರಿಗೂ ಪತ್ರಿಕೆಯನ್ನು ನೀಡಿದ್ದು ಆಯಿತು. ಕೆಲವು ಮಕ್ಕಳು ಕಣ್ಣು ಒದ್ದೆಮಾಡಿಕೊಂಡಿದ್ದರು, ಕೆಲವರು ಒಂದೊAದು ಅಂಕವು ಎಲ್ಲಿ ಹೋಗಿದೆ ಎಂದು ನೋಟ್ಸ್ಗಳ ಜೊತೆಗಿಟ್ಟುಕೊಂಡು ನೋಡಿದರು. ಇದು ಮೊದಲ ಕಿರುಪರೀಕ್ಷೆ ಆದ್ದರಿಂದ ಎಚ್ಚರಿಕೆಯ ನುಡಿಗಳನ್ನಾಡಿ, ಒಂದಿಷ್ಟು ಮನೆಕೆಲಸವನ್ನು ನೀಡಿದ್ದಾಯಿತು. ಮತ್ತೊಂದು ಕಿರುಪರೀಕ್ಷೆ ಬಂದಾಗಲೂ ಇದೇ ರೀತಿಯ ವರ್ತನೆಗಳು ಪುನರಾವರ್ತನೆ ಆಗದಿರಲಿ ಎಂದು ಎಚ್ಚರಿದ್ದಾಯಿತು.
ಅನೇಕ ಪ್ರಶ್ನೆಗಳಿಗೆ ಪ್ರಶ್ನೆಗಳನ್ನೇ ಉತ್ತರವಾಗಿ ಬರೆಯುತ್ತಿದ್ದ ಮಗುವನ್ನು ಗುರುತಿಸಿದೆ. ತರಗತಿ ಮುಗಿದ ನಂತರ ಊಟಕ್ಕೆ ಹೊರಡುವಾಗ ಆ ಮಗುವನ್ನು ನಿಲ್ಲಿಸಿ ಕೇಳಿದೆ. ‘ನಿಧಿ ನಿನಗೆ ಹೊಡೆಯಲ್ಲ, ಬಯ್ಯಲ್ಲ ಆದರೆ ನಿನಗೆ ಏನು ಸಮಸ್ಯೆ ಅಂತ ಹೇಳು ಕಂದ, ಬರೀ ತಪ್ಪು ಬರೀತಾ ಹೋದರೆ ಪಾಸ್ ಆಗೋದು ಹೇಗೆ? ಹೇಳು’ ಆ ಮಗು ಸ್ವಲ್ಪ ಚಡಪಡಿಸಿತು ತದನಂತರ ಧೈರ್ಯ ತಂದುಕೊಂಡು, ‘ಸರ್ ನಿಜ ಹೇಳಲಾ?’ ‘ಹೂ ಹೇಳು ಕಂದ’ ‘ಅದು… ನನಗೆ…’ ‘ಹೂ ಹೇಳಮ್ಮ ಅದಕ್ಯಾಕೆ ಇಷ್ಟು ರಾಗ, ಬೇಗ ಹೇಳು’ ‘ಅದು ನನಗೆ ಕನ್ನಡ ಅಕ್ಷರಗಳು ಗುರುತಿಸೋಕೆ ಬರಲ್ಲ, ಯಾವ ಅಕ್ಷರಗಳು ಅಂತ ಸರಿಯಾಗಿ ಗೊತ್ತಾಗಲ್ಲ ಸರ್..’

sri krishnadevaraya hampi


‘ಭಗವಂತ… ನಿಮ್ಮ ಮಾತೃಭಾಷೆ ಯಾವುದು?’ ‘ಕನ್ನಡಾನೇ ಸರ್’ ‘ನೀನು ಬರಿಯೋದು ನೋಡಿದರೆ ನಿಮ್ಮ ಭಾಷೆ ಬೇರೆ ಇರಬೇಕು ಅನ್ಕೊಂಡಿದ್ದೆ. ನೀನು ಹಿಂದಿನ ಶಾಲೆಲಿ ಓದುವಾಗ ಅಲ್ಲಿ ಕನ್ನಡ ಭಾಷೆ ಇರಲಿಲ್ಲವಾ? ಟೀಚರ್ ಹೀಗೆ ತಪುö್ಪ ಬರೆದರೂ ಏನು ಹೇಳ್ತಾ ಇರಲಿಲ್ಲವಾ?’ ‘ಇತ್ತು ಸರ್, ನೋಟ್ಸ್ ನ ಬೋರ್ಡ್ ಮೇಲೆ ಬರೀತಾ ಇದ್ದರು, ನಾನು ಬರ್ಕೋತಾ ಇದ್ದೆ ಬರೀವಾಗ ಅದರಲ್ಲಿ ತುಂಬಾನೇ ತಪುö್ಪ ಇರ್ತಾ ಇತ್ತು, ಆದ್ರೂ ಟೀಚರ್ ಗುಡ್ ಹಾಕಿಕೊಡೋರು’ ಒಮ್ಮೆ ಆ ಶಿಕ್ಷಕರನ್ನು ನೆನೆಸಿಕೊಂಡು ಕೆಂಡದಂತ ಕೋಪ ಬಂತು. ಇದರಲ್ಲಿ ಮಗುದು ತಪ್ಪೇನುಇಲ್ಲ ಅನ್ನಿಸ್ತು. ‘ಬರೀ ಸಂಬಳಕ್ಕೆ ಪಾಠ ಮಾಡೋ ಟೀಚರ್ ಇರಬೇಕು ಅನ್ನಿಸ್ತು.’ ಮಗು ಮಾತು ಮುಂದುವರೆಸ್ತು, ‘ಸರ್ ನೀವು ಸರಿಯಾಗಿ ನನಗೆ ಹೇಳಿಕೊಡೋದಾದರೆ ನಾನು ಕಲಿತೀನಿ’ ಬಹುಶ ಮಗುವಿಗೆ ಒಂದು ಹಂತಕ್ಕೆ ಧೈರ್ಯ ಬಂದಿರಬಹುದು ಅನ್ನಿಸ್ತು, ‘ಸರಿ ಕಂದ ನಾಳೆಯಿಂದ ದಿನಕ್ಕೆ 1 ಪುಟ ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಬರೆದುಕೊಂಡು, ನಾ ಎಲ್ಲಿದ್ದರೂ ಅಲ್ಲಿಗೆ ಬಂದು ತೋರಿಸಬೇಕು, ಅದರ ಜೊತೆಗೆ ಏನು ಬರೆದಿದಿಯೋ ಅದನ್ನು ಓದಿ ಹೇಳಬೇಕು, ಆಯ್ತಾ’ ‘ಆಯ್ತು ಸರ್’ ಮಗುವಿನ ಮೊಗದಲ್ಲಿ ಒಂದು ಹೊಸ ಉತ್ಸಾಹ ನೋಡಿದೆ. ನನಗೂ ಕೂಡ ಒಂದು ಸವಾಲ್ ಎನಿಸುವ ತರದಲ್ಲಿ ಕಂಡಿತು. ನಾನು ಕಲಿಸುವ ನಿಟ್ಟಿನಲ್ಲಿ ತಯಾರಾದೆ.
ಮರುದಿನ ಮಗು ಉತ್ಸಾಹದಿಂದ ಬರೆದುಕೊಂಡು ಬಂದಿತು. ನಾ ಇದ್ದಲ್ಲಿಗೆ ಬಂದು ತೋರಿಸಿತು. ನಂತರ ಓದಲು ಪ್ರಾರಂಭಿಸಿತು. ಅಲ್ಲಲ್ಲಿ ಕೊಂಚ ತಪುö್ಪತ್ತಿತ್ತು. ಸರಿಪಡಿಸಿದ ನಂತರ ಮತ್ತೊಮ್ಮೆ ಓದಲು ಮುಂದಾಯಿತು. ‘ಶಹಬ್ಬಾಷ್ ಹೀಗೆ ಮುಂದುವರೆಸು’. ಇದಾದ ನಂತರದಲ್ಲಿ ಕಾಗುಣಿತ ಅಕ್ಷರಗಳನ್ನು ಬರೆಯಲು ತಿಳಿಸಿದೆ. ದಿನಕಳೆದಂತೆ ಈ ಮಗು ಉತ್ಸಾಹ ಕಳೆದುಕೊಳ್ಳಬಹುದು, ಬರೆಯದೇ ಇರಬಹುದು ಎಂದುಕೊಂಡ ನನ್ನ ಆಲೋಚನೆಗಳನ್ನು ಬುಡಮೇಲು ಮಾಡಿತು. ಬೆಳಗ್ಗೆ ಶಾಲೆಗೆ ಬಂದೊಡನೆ ಖುಷಿಯಿಂದ ಬರೆದಿದ್ದನ್ನು ತೋರಿಸಲು ಆಸಕ್ತಿಯಿಂದ ಬರುವುದು, ಬರೆದಿದ್ದನ್ನು ಓದುವ ರೀತಿಯನ್ನು ಕಲಿಯತೊಡಗಿತು. ನಂತರದ ದಿನಗಳಲ್ಲಿ ಎರಡು ಮೂರು ಅಕ್ಷರಗಳ, ಒತ್ತಕ್ಷರಗಳ ಪದಗಳನ್ನು ಬರೆದು ಓದತೊಡಗಿತು. ಹಲವು ದಿನಗಳ ನಂತರ ಮಗು ಉತ್ಸಾಹದಿಂದ ‘ಸರ್ ಇನ್ಮುಂದೆ ಪಾಠವನ್ನು ಬರೆದುಕೊಂಡು ಬರ್ತಿನಿ, ಒಂದಲ್ಲ ಎರಡು ಪುಟ ಬರಿತೀನಿ’ ಈ ಮಾತನ್ನು ಹೇಳುವಾಗ ಆ ಮಗುವಿಗೆ ಬಂದಿರುವ ಧೈರ್ಯ, ನಂಬಿಕೆ ಕಂಡು ಬಹಳ ಖುಷಿಯಾಯ್ತು. ಒಂದೆರಡು ದಿನಗಳ ನಂತರ ತನ್ನ ನೋಟ್ಸ್ ತೆಗೆದುಕೊಂಡು ಬಂದಿತು. ‘ಹಿಂದಿನ ಬರಹಕ್ಕಿಂತ ಹೀಗಿನ ಬರಹ ಚೆನಾಗಿದೆ ಅಲಾ ಸರ್’ ಎಂದಾಗ ಅದೇನೋ ಸಂತೃಪ್ತ ಭಾವನೆ.
ಈಗಾಗಲೇ 1 ವರ್ಷ ಕಳೆದಿದೆ. ಆ ಮಗು ಬರವಣಿಗೆಯಲ್ಲಿ, ಓದುವುದರಲ್ಲಿ ತನ್ನ ತರಗತಿಯ ಮಕ್ಕಳಿಗಿಂತ ಸ್ವಲ್ಪ ಹಿಂದಿದೆ ನಿಜ ಆದರೆ ಈಗ ಮೂಡಿರುವ ಆ ಉತ್ಸಾಹ ಹೀಗೇ ಇದ್ದರೆ, ಕಲಿಯುವ ಆಸಕ್ತಿ ಕುಂದದೇ ಹೋದರೆ ಮೊದಲ ಸ್ಥಾನ ಬರದೇ ಹೋದರು ಮೊದಲ ಸಾಲಿನಲ್ಲಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಲಿಕೆ ಎಂಬುದು ಹೇಗಿರಬೇಕು, ಅದರೆಡೆಗಿನ ನಿರಂತರ ಪ್ರಯತ್ನ ಹೇಗಿರಬೇಕು ಎಂಬುದನ್ನು ಅಕ್ಷರಶಃ ಈ ಮಗು ಮಾತಲ್ಲಿ ಅಲ್ಲ ಕೃತಿಯಲ್ಲಿ ತಿಳಿಸಿತು. ತಾನು ಕಲಿಯುವ ಮೂಲಕ, ಕಲಿಸುವ ನನಗೂ ‘ಹೊಸದಾದ ಪಾಠವನ್ನು ಕಲಿಸಿತು’…

Contact us for classifieds and ads : +91 9742974234



 
error: Content is protected !!